ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದ ಕಡೆಗಣನೆ ಬಗೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಅದರ ಪ್ರತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಹ ಕಳಿಸಿದ್ದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತರ ಸಹ ಬಂತು.
ಅಭಿವ್ರುದ್ಧಿ ಪ್ರಾಧಿಕಾರವು ಇದರ ಬಗ್ಗೆ ಗಮನಹರಿಸಿ ಪತ್ರ ಬರೆದಿರುವುದು ನಿಜಕ್ಕು ಸಂತೋಷದ ವಿಚಾರ. ಆದರೆ ಪ್ರಾಧಿಕಾರವು ತ್ರಿಭಾಷಾ ಸೂತ್ರದ ಬಳಕೆಯ ಬಗೆಗಿನ ಅರಿವು ಸರಿಯಿಲ್ಲದ್ದಾಗಿದೆ. ತ್ರಿಭಾಷ ಸೂತ್ರ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆ. ಬೆಂಗಳೂರಿನ ವಿಮಾನ ನಿಲ್ದಾಣ ಕೇಂದ್ರ ಸರಕಾರಿ ಕಚೇರಿಯಲ್ಲದ್ದರಿಂ ದ ತ್ರಿಭಾಷ ಸೂತ್ರ ಅನ್ವಯವಾಗುವುದಿಲ್ಲ ಎನ್ನುವುದನ್ನು ತಿಳಿಯಬೇಕಾಗಿದೆ
ಸುಖಾ ಸುಮ್ಮನೆ ನಮ್ಮ ಮೇಲೆ ನಾವೆ ಹಿಂದಿಯನ್ನು ಹೇರಿಕೊಳ್ಳುವುದನ್ನು ನಾವು ನಿಲ್ಲಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗೆಗೆ ಎಚ್ಚರ ವಹಿಸಿ ಸಲ್ಲದ ಹಿಂದಿ ಹೇರಿಕೆಗೆ ಕಡಿವಾಣ ಹಾಕಬೇಕು.
ಕನ್ನಡ ಅಭಿವೃದ್ಢಿ ಪ್ರಾಧಿಕಾರದಿಂದ ಬಂದ ಉತ್ತರ ಹೀಗಿದೆ:
****************************** ****************************** ********
ಸಂಖ್ಯೆ: ಕಅಪ್ರಾ:ಅ: :೨೦೧೨-೧೩
ದಿನಾಂಕ: ೨೦-೦೬-೨೦೧೨
ಮಾನ್ಯರೆ,
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಶಾಸ್ತ್ರೀಯ ಸ್ಥಾನಮಾನ ದೊರೆಕಿರುವ ಹಿನ್ನಲೆಯಲ್ಲಿ ಕನ್ನಡ ಭಾಷೆಯನ್ನು ಎಲ್ಲಾ ಹಂತದಲ್ಲೂ ಬಳಕೆ ಆಗಬೇಕೆನ್ನುವುದು ಸರ್ಕಾರದ ಆಶಯ ಹಾಗೂ ದಿಟ್ಟ ನಿಲುವು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡವನ್ನು ಬಳಸುತ್ತಿಲ್ಲ ಎನ್ನುವ ಬಗ್ಗೆ ಬಹಳಷ್ಟು ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ದಿನಾಂಕ ೨೯-೦೪-೨೦೦೯ರಿಂದಲೂ ಪತ್ರ ಬರೆಯುತ್ತಾಲೇ ಬಂದಿದ್ದೇನೆ. ಆದರೂ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸದಿರುವುದು, ಕನ್ನಡ ಬಳಸಿರುವ ಕಡೆ ಪ್ರಾಮುಖ್ಯತೆ ನೀಡದಿರುವುದು ದುರದುಷ್ಟಕರ. ಬೇರೆ ದೇಶದ ವಿಮಾನ ನಿಲ್ದಾಣಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಪ್ರಾಧ್ಯಾನತೆ ನೀಡಿರುವ ಬಗ್ಗೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಗ್ಗೆ ರವಿಯವರ ಮನವಿಯನ್ನು ಲಗತ್ತಿಸಿದೆ. ಅಲ್ಲದೆ ವಿಮಾನ ನಿಲ್ದಾಣದ ಅಧಿಕಾರಿಗಳು ಕನ್ನಡವನ್ನು ಲಘುವಾಗಿ ಪರಿಗಣಿಸುತ್ತಿರುವ ಬಗ್ಗೆ ಜೂನ್ ೨೦, ೨೦೧೨ರ ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ವಾಚಕರ ವಿಜಯ ಅಂಕಣದಲ್ಲಿ ಪ್ರಕಟಗೊಂಡಿರುವ “ಕನ್ನಡ ಕಡೆಗಣನೆ” ಸುದ್ದಿಯ ತುಣುಕನ್ನು ಇದರೊಂದಿಗೆ ಲಗತ್ತಿಸಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳ್ಳಿಸುವಲಿ, ವಿಮಾನ ನಿಲ್ದಾಣದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಕನ್ನಡ ನೆಲದ ಕಾನೂನಿಗೆ ಅಗೌರವ ತೋರುತ್ತಿರುವುದೇ ಅಲ್ಲದೆ, ಕನ್ನಡ ನಾಡಿನ ಜನರ ತೆರಿಗೆ ಹಣದಲ್ಲಿ ಜೀವನ ನಿರ್ವಹಿಸುತ್ತಿರುವ ಅಧಿಕಾರಿಗಳು ಕನ್ನಡ ಭಾಷೆಯನ್ನು ನಿಕೃಷ್ಟವಾಗಿ ಕಾಣುವ ಮನೋಭೂಮಿಕೆಯನ್ನು ಬೆಳಸಿಕೊಳ್ಳುವ ಮೂಲಕ ಉದ್ದಟತನ ಪ್ರದರ್ಶಿಸುತ್ತಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತ್ರಿಭಾಷಾ ಸೂತ್ರದನ್ವಯ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರತಕ್ಕದು ಮತ್ತು ಭಾಷೆಗಳನ್ನು ಬಳಸುವ ಸಂದರ್ಭದಲ್ಲಿ ಕನ್ನಡ ಆವೃತ್ತಿಯ ಕೆಳಗೆಬರತಕ್ಕದು. ಕನ್ನಡ ನಾಮಫಲಕವನ್ನು ಹೆಚ್ಚು ಎದ್ದುಕಾಣುವಂತೆ ಬರೆಸತಕ್ಕದು. ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿ ಅಂತರ್ಜಾಲತಾಣದಲ್ಲಿ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಬೇಕು. ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆಯ ಚೀಟಿಯನ್ನು ಆಂಗ್ಲಭಾಷೆಯ ಜೊತೆಗೆ ಕನ್ನಡವನ್ನು ಪ್ರಧಾನವಾಗಿ ಮುದ್ರಿಸುವುದು. ಅಲ್ಲದೆ ಇತರಭಾಷಾ ಪತ್ರಿಕೆಗಳ ಜೊತೆ ಕನ್ನಡ ಪತ್ರಿಕೆಗಳು ದೊರೆಯುವಂತೆ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕಾಗಿ ಕೋರುತ್ತೇನೆ. ತಾವು ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡುವುದು.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
-ಸಹಿ-
(ಡಾ. ಮುಖ್ಯಮಂತ್ರಿ ಚಂದ್ರು)
ಶ್ರೀ ರಾಜ್ಕುಮಾರ್ ಖತ್ರಿ ಭಾ.ಆ.ಸೇ.,
ಪ್ರಧಾನ ಕಾರ್ಯದರ್ಶಿಗಳು,
ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ,
ವಿಕಾಸಸೌಧ,
ಬೆಂಗಳೂರು
ಪ್ರತಿಯನ್ನು: ಶ್ರೀ ರವಿ, ಬೆಂಗಳೂರು ಇವರಮಾಹಿತಿಗಾಗಿ
****************************** ****************************** ********